ಜೋ ಜೀತಾ ವಹಿ ಸಿಕಂದರ್ (ಅನುವಾದ:ಯಾರು ಗೆಲ್ಲುವನೊ, ಅವನು ರಾಜನಾಗುವನು) ೧೯೯೨ರ ಒಂದು ಕ್ರೀಡಾ ನಾಟಕ ಚಲನಚಿತ್ರ. ಮನ್ಸೂರ್ ಖಾನ್ ಇದರ ನಿರ್ದೇಶಕರು ಮತ್ತು ಸಹ-ಬರಹಗಾರರಾಗಿದ್ದರು. ನಾಸಿರ್ ಹುಸೇನ್ ಇದರ ನಿರ್ಮಾಪಕರು ಮತ್ತು ಸಹ-ಬರಹಗಾರರಾಗಿದ್ದರು. ಚಿತ್ರದಲ್ಲಿ ಆಮಿರ್ ಖಾನ್‌, ಆಯೆಷಾ ಝುಲ್ಕಾ, ದೀಪಕ್ ತಿಜೋರಿ, ಪೂಜಾ ಬೇದಿ, ಮಮಿಕ್ ಸಿಂಗ್ ಮತ್ತು ಕುಲ್‍ಭೂಷಣ್ ಖರ್ಬಂದಾ ನಟಿಸಿದ್ದಾರೆ. ಆಮಿರ್‌ರ ಸೋದರ ಫ಼ೈಸಲ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಜತಿನ್ ಲಲಿತ್‍ರದ್ದಾಗಿತ್ತು. ಜೋ ಜೀತಾ ವಹಿ ಸಿಕಂದರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಎರಡು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು. ಚಿತ್ರವು ಭಾರತದಲ್ಲಿ ₹೪೦ ಮಿಲಿಯನ್‍ಗಿಂತ ಹೆಚ್ಚು ಹಣಗಳಿಸಿತು. ಹಣದುಬ್ಬರಕ್ಕೆ ಸರಿಹೊಂದಿಸಿದಾಗ ಇದು ₹713 ಮಿಲಿಯನ್‍ನಷ್ಟಾಗುತ್ತದೆ. ೧೯೭೯ರ ಚಲನಚಿತ್ರ ಬ್ರೇಕಿಂಗ್ ಅವೆ ಮೇಲೆ ಆಧಾರಿತವಾದ ಈ ಚಿತ್ರವು ಮಾರ್ಗ ಪ್ರವರ್ತಕವಾಯಿತು ಮತ್ತು ತೆಲುಗು ಚಿತ್ರ ತಮ್ಮುಡುಗೆ (೧೯೯೯) ಸ್ಫೂರ್ತಿಯಾಯಿತು. ತಮಿಳಿನಲ್ಲಿ ಬದ್ರಿ (೨೦೦೧) ಎಂದು, ಕನ್ನಡದಲ್ಲಿ ಯುವರಾಜ (೨೦೦೧) ಎಂದು ಮತ್ತು ಬಂಗಾಳಿಯಲ್ಲಿ ಚ್ಯಾಂಪಿಯನ್ (೨೦೦೩) ಎಂದು ರೀಮೇಕ್ ಆಯಿತು. ಜೋ ಜೀತಾ ವಹಿ ಸಿಕಂದರ್ ಡಿಸ್ನಿ ಚ್ಯಾನಲ್ ಇಂಡಿಯಾದಲ್ಲಿ ಕೂಡ ಪ್ರಸಾರವಾಯಿತು. == ಕಥಾವಸ್ತು == ಚಿತ್ರವು ದೆಹರಾದೂನ್‍ನಲ್ಲಿ ಹಿನ್ನೆಲೆಯನ್ನು ಹೊಂದಿದೆ. ಚಿತ್ರವು ನಗರದಲ್ಲಿನ ವಿವಿಧ ಕಾಲೇಜುಗಳ ವಿವರದಿಂದ ತೆರೆಯುತ್ತದೆ. ರಾಜ್‍ಪೂತ್ ಕಾಲೇಜು ಶ್ರೀಮಂತ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಹೊಂದಿರುತ್ತದೆ. ಪ್ರತಿ ವಿದ್ಯಾರ್ಥಿಯು ಕೋಟ್ಯಂತರ ಬೆಲೆಯ ಸಂಪತ್ತಿಗೆ ವಾರಸುದಾರನಾಗಿರುತ್ತಾನೆ. ಇದಕ್ಕೆ ವಿರುದ್ಧವಾಗಿ, ಮಾಡಲ್ ಕಾಲೇಜು ಸ್ಥಳೀಯ ಬಡವರ ಮನೆಗಳ ವಿದ್ಯಾರ್ಥಿಗಳನ್ನು ಹೊಂದಿರುತ್ತದೆ. ಇತರ ಕಾಲೇಜುಗಳೆಂದರೆ ಕ್ಸೇವಿಯರ್ಸ್ ಕಾಲೇಜು ಮತ್ತು ಕ್ವೀನ್ಸ್ ಕಾಲೇಜು. ಕ್ವೀನ್ಸ್ ಕಾಲೇಜು ಹುಡುಗಿಯರ ಕಾಲೇಜಾಗಿದ್ದು ಇತರ ಮೂರು ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿಗಳನ್ನು ಓಲೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ವಾರ್ಷಿಕ ಅಂತರಕಾಲೇಜು ಕ್ರೀಡಾ ಚ್ಯಾಂಪಿಯನ್‍ಶಿಪ್ ಮತ್ತು ಪ್ರಧಾನ ಕಾರ್ಯಕ್ರಮವಾಗಿ ಸುದೀರ್ಘ ಸೈಕಲ್ ಓಟವು ಪಟ್ಟಣದ ಗಮನಾರ್ಹ ವೈಶಿಷ್ಟ್ಯವಾಗಿರುತ್ತದೆ. ಚಿತ್ರದ ಆರಂಭದಲ್ಲಿ, ಮಾಡಲ್ ಕಾಲೇಜ್‍ನ ರತನ್ ಲಾಲ್ ಶರ್ಮಾ (ಮಮಿಕ್ ಸಿಂಗ್) ಮತ್ತು ರಾಜ್‍ಪೂತ್ ಕಾಲೇಜ್‍ನ ಶೇಖರ್ ಮಲ್ಹೋತ್ರಾ (ದೀಪಕ್ ತಿಜೋರಿ) ನಡುವೆ ರೇಸ್ ನಡೆಯುತ್ತದೆ. ರತನ್ ಬಳಿ ಕೆಳಮಟ್ಟದ ಸೈಕಲ್ ಇದ್ದ ಕಾರಣ ಶೇಖರ್ ರೇಸ್ ಗೆಲ್ಲುತ್ತಾನೆ. ರೇಸ್‍ನ ನಂತರ, ಇಬ್ಬರನ್ನೂ ಅವರವರ ಶಾಲೆಗಳು ಸನ್ಮಾನಿಸುತ್ತವೆ. ಇದರಿಂದ ಶೇಖರ್‌ಗೆ ಅಹಂಕಾರ ಮತ್ತು ಜಂಬ ಬರುತ್ತದೆ. ಸಂಜು (ಆಮಿರ್ ಖಾನ್) ರತನ್‍ನ ತಮ್ಮನಾಗಿರುತ್ತಾನೆ ಮತ್ತು ರತನ್‍ಗೆ ತದ್ವಿರುದ್ಧನಾಗಿರುತ್ತಾನೆ. ಅವನು ಹೊಣೆಯಿಲ್ಲದ ಯುವಕನಾಗಿದ್ದು ಸ್ವಾರ್ಥಪರನಾಗಿರುತ್ತಾನೆ. ಅವನ ತಂದೆ ರಾಮ್‍ಲಾಲ್ (ಕುಲ್‍ಭೂಷಣ್ ಖರ್ಬಂದಾ) ಅವನು ಹೆಚ್ಚು ಪ್ರಬುದ್ಧನಾಗಿ ರತನ್‍ನಂತೆ ಜವಾಬ್ದಾರಿಯುತನಾಗಬೇಕೆಂದು ಬಯಸುತ್ತಾನೆ. ಇದರಿಂದ ಸಂಜು ಯಾವಾಗಲೂ ಶಿಕ್ಷೆಗೊಳಗಾಗುತ್ತಿರುತ್ತಾನೆ. ಸಂಜು ಮತ್ತು ಅಂಜಲಿ (ಆಯೇಶಾ ಝುಲ್ಕಾ) (ಇವಳಿಗೆ ಸಂಜುನ ಮೇಲೆ ವ್ಯಾಮೋಹವಿರುತ್ತದೆ) ಸೇರಿದಂತೆ ಅವನ ಪುಟ್ಟ ತಂಡವು ಶಾಲೆಗೆ ಹೋಗುವುದನ್ನು ತಪ್ಪಿಸಿ ಸಿಗರೇಟು ಸೇದಿ ಪಟ್ಟಣದ ಸುತ್ತ ಅಲೆದಾಡುತ್ತಿರುತ್ತದೆ. ಅಂಜಲಿ ಮತ್ತು ಅವಳ ತಂದೆ ಒಂದು ವಾಹನ ರಿಪೇರಿ ಅಂಗಡಿಯನ್ನು ನಡೆಸುತ್ತಿರುತ್ತಾರೆ. ಅವಳು ಸಂಜುನಿಂದ ದೂರವಿರಬೇಕೆಂದು ಅಂಜಲಿಯ ತಂದೆ ಅವಳನ್ನು ಕೇಳಿಕೊಳ್ಳುತ್ತಾನೆ. ರಾಮ್‍ಲಾಲ್ ಮತ್ತು ಅವನ ಕುಟುಂಬವು ಒಂದು ಸಣ್ಣ ಹೊಟೇಲನ್ನು ನಡೆಸುತ್ತಿರುತ್ತದೆ. ಇದು ಬಹುತೇಕ ಕಾಲೇಜು ವಿದ್ಯಾರ್ಥಿಗಳಿಗೆ ಭೇಟಿಯ ಸ್ಥಳವಾಗಿರುತ್ತದೆ. ರತನ್ ಮತ್ತು ಅವನ ತಂದೆಯನ್ನು ಅವಮಾನಿಸುವ ಶೇಖರ್‌ನ ಪ್ರಯತ್ನಗಳ ಕಾರಣ ಸಂಜು ಮತ್ತು ಶೇಖರ್ ನಡುವೆ ಅನೇಕ ಜಗಳಗಳು ನಡೆಯುತ್ತವೆ. ದೇವಿಕಾಳ (ಪೂಜಾ ಬೇದಿ) ಪ್ರವೇಶವಾದಂತೆ ತಕ್ಷಣ ಸಂಜು ಮತ್ತು ಶೇಖರ್ ಇಬ್ಬರನ್ನೂ ಆಕರ್ಷಿಸುತ್ತಾಳೆ. ಆರಂಭದಲ್ಲಿ, ಅವಳು ಶೇಖರ್‌ನತ್ತ ಪ್ರೀತಿ ತೋರುತ್ತಾಳೆ. ಒಂದು ದಿನ ಶೇಖರ್‌ನನ್ನು ಭೇಟಿಯಾಗಲು ಪಿಕ್ನಿಕ್‍ಗೆ ಹೋಗುವ ದಾರಿಯಲ್ಲಿ ಬಸ್‍ನ್ನು ತಪ್ಪಿಸಿಕೊಳ್ಳುತ್ತಾಳೆ. ಇದೇ ವೇಳೆ, ಪಟ್ಟಣದಲ್ಲಿ ಸುತ್ತಾಡಲು ಕಾರ್ ಕೊಡುವಂತೆ ಸಂಜು ಅಂಜಲಿಯನ್ನು ಕೇಳುತ್ತಾನೆ. ದಾರಿಯಲ್ಲಿ ಅವನಿಗೆ ದೇವಿಕಾ ಕಂಡಾಗ ತನ್ನ ಸ್ನೇಹಿತರನ್ನು ಪಾನ್ ಅಂಗಡಿಯಲ್ಲಿ ಬಿಟ್ಟು ಅವಳಿಗೆ ಸವಾರಿ ನೀಡುತ್ತಾನೆ. ತನ್ನ ಗಮ್ಯಸ್ಥಳವನ್ನು ಮುಟ್ಟಿದಾಗ ಶೇಖರ್ ಮತ್ತೊಬ್ಬ ಹುಡುಗಿಯೊಂದಿಗೆ ಇರುವುದನ್ನು ದೇವಿಕಾ ಕಂಡು ಸಂಜು ಜೊತೆಗೆ ಹೋಗುತ್ತಾಳೆ. ಸಂಜು ಶ್ರೀಮಂತನಲ್ಲದಿದ್ದರೂ ತನ್ನ ಸಂಪತ್ತಿನ ಬಗ್ಗೆ ಜಂಬ ಕೊಚ್ಚಿಕೊಂಡು ತಾನು ಕ್ಸೇವಿಯರ್ ಶಾಲೆಯ ವಿದ್ಯಾರ್ಥಿ ಎಂದು ಹೇಳುತ್ತಾನೆ. ಒಂದು ನೃತ್ಯ ಸ್ಪರ್ಧೆಯ ವೇಳೆ ಮಾಡಲ್ ಕಾಲೇಜ್ ಗುಂಪಿನಲ್ಲಿ ಸಂಜು ಕುಣಿಯುತ್ತಿರುವುದನ್ನು ದೇವಿಕಾ ಕಂಡಾಗ ಅವನ ಸುಳ್ಳು ಅಂತಿಮವಾಗಿ ಬಹಿರಂಗಗೊಳ್ಳುತ್ತದೆ. ಕಾರ್ಯಕ್ರಮದ ನಂತರ, ಸಂಜು ಮತ್ತು ದೇವಿಕಾ ಬೇರೆಯಾಗುತ್ತಾರೆ ಮತ್ತು ಒಂದು ಭಾವೋದ್ರಿಕ್ತ ವಾದಸರಣಿಯಲ್ಲಿ ಸಂಜು ಶೇಖರ್‌ನ ಗೆಳೆಯರೊಂದಿಗೆ ಜಗಳವಾಡುತ್ತಾನೆ. ಸಂಜು ಬಹುತೇಕವಾಗಿ ಮಣಿದಿರುವಾಗ ಅವನ ಅಣ್ಣ ಮಧ್ಯ ಬಂದು ಶೇಖರ್‌ನ ಸ್ನೇಹಿತರನ್ನು ದೂರ ಓಡಿಸುತ್ತಾನೆ. ತಾನು ಸಂಜುಗೆ ಬ್ಯಾಂಕ್‍ನಲ್ಲಿ ಜಮಾಮಾಡಲು ನೀಡಿದ್ದ ಹಣದ ಬಗ್ಗೆ (ಅವನು ಅದನ್ನು ದೇವಿಕಾ ಮೇಲೆ ಖರ್ಚುಮಾಡಿರುತ್ತಾನೆ) ರಾಮ್‍ಲಾಲ್ ಸಂಜುಗೆ ಕೇಳಿದಾಗ ಅದು ಸಂಜು ಮತ್ತು ಅವನ ತಂದೆಯ ನಡುವೆ ಕೋಪದ ವಾದಸರಣಿಗೆ ಕಾರಣವಾಗಿ ಸಂಜುನನ್ನು ಮನೆಯಾಚೆಗೆ ಹಾಕಲಾಗುತ್ತದೆ. ಮರುದಿನ ಬೆಳಿಗ್ಗೆ, ರಾಮ್‍ಲಾಲ್ ಪಟ್ಟಣಕ್ಕೆ ಹೊರಡುತ್ತಾನೆ. ಅಪ್ಪನು ಅವನನ್ನು ಕ್ಷಮಿಸಿದ್ದಾನೆ ಮತ್ತು ಅವನಿಗೆ ಮನೆಗೆ ಮರಳಲು ಹೇಳಿದ್ದಾನೆ ಎಂದು ರತನ್ ಸಂಜುಗೆ ಹೇಳುತ್ತಾನೆ. ಇದನ್ನು ಸಂಜು ನಿರ್ಲಕ್ಷಿಸಲು ಪ್ರಯತ್ನಿಸುತ್ತಾನೆ. ರತನ್ ಮತ್ತು ಶೇಖರ್ ನಡುವೆ ಕೋಪಯುಕ್ತ ವಾದಸರಣಿ ಮತ್ತು ಜಗಳವುಂಟಾಗಿ ರತನ್ ಆಕಸ್ಮಿಕವಾಗಿ ಪ್ರಪಾತದಿಂದ ಕೆಳ ಬೀಳುತ್ತಾನೆ. ರತನ್ ಆಸ್ಪತ್ರೆಯಲ್ಲಿರುವಾಗ, ಸಂಜು ರತನ್‍ನೊಂದಿಗಿನ ತನ್ನ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾನೆ. ತನ್ನ ಅಪ್ಪ ಮರಳಿದಾಗ, ಸಂಜು ಅವನೊಂದಿಗೆ ರಾಜಿಯಾಗುತ್ತಾನೆ. ರತನ್ ಆಸ್ಪತ್ರೆಯಲ್ಲಿರುವಾಗ, ಸಂಜು ಹೆಚ್ಚು ಜವಾಬ್ದಾರಿಯುತನಾಗಿ ತನ್ನ ಅಪ್ಪ ಮತ್ತು ಹಾಸಿಗೆ ಹಿಡಿದ ಅಣ್ಣನಿಗಾಗಿ ಆರೈಕೆ ಮಾಡಲು ಆರಂಭಿಸುತ್ತಾನೆ. ಅವನು ಅಂಜಲಿಯ ನೆರವಿನಿಂದ ರೇಸ್‍ನಲ್ಲಿ ಭಾಗವಹಿಸಲು ಮತ್ತು ರತನ್‍ಗಾಗಿ ಸಾಧ್ಯವಾದಷ್ಟು ಗೆಲ್ಲಲು ಪ್ರಯತ್ನಿಸಲು ನಿರ್ಧರಿಸುತ್ತಾನೆ. ತನ್ನ ತರಬೇತಿಯ ವೇಳೆ, ಅಂಜಲಿಯ ಬಗ್ಗೆ ತನ್ನ ನಿಜವಾದ ಅನಿಸಿಕೆಗಳ ಅರಿವಾಗಿ ಸಂಜು ಅಂಜಲಿಯನ್ನು ಪ್ರೀತಿಸತೊಡಗುತ್ತಾನೆ. ರೇಸ್‍ನ ಒಂದು ದಿನ ಮೊದಲು, ಸಂಜುಗೆ ಅಪಘಾತದ ನೈಜ ಕಾರಣ ತಿಳಿದು ರತನ್‍ನ ಎದುರುಬೀಳುತ್ತಾನೆ. ಸಂಜು ಜವಾಬ್ದಾರಿಯುತನಾಗಿ ತಮ್ಮೆಲ್ಲರಿಗೂ ಹೆಚ್ಚು ಹತ್ತಿರವಾಗಿದ್ದರಿಂದ ತಾನು ಏನೂ ಹೇಳಲಿಲ್ಲವೆಂದು ರತನ್ ಹೇಳುತ್ತಾನೆ. ಅವನು ತನ್ನ ಸೋದರನನ್ನು ನಿಜವಾಗಿ ಪ್ರೀತಿಸುವುದಾದರೆ ರೇಸ್‍ನಲ್ಲಿ ಸಾಧ್ಯವಾದಷ್ಟು ಉತ್ತಮ ಯತ್ನ ಮಾಡುವಂತೆ ರತನ್ ಸಂಜುಗೆ ಕೇಳಿಕೊಳ್ಳುತ್ತಾನೆ. ತನ್ನ ಹೊಸ ಸೈಕಲ್‍ನೊಂದಿಗೆ ಸಂಜು ರೇಸ್‍ನಲ್ಲಿ ಭಾಗವಹಿಸುತ್ತಾನೆ. ರೇಸ್ ಸಮಸಮವಾಗಿ ಆರಂಭವಾಗಿ ಸಂಜು ಮತ್ತು ಶೇಖರ್ ಸಮಸಮನಾಗಿ ಹೋಗುತ್ತಿರುತ್ತಾರೆ. ಎಲ್ಲೊ ಮಧ್ಯದಲ್ಲಿ, ಇಬ್ಬರೂ ಬಿದ್ದು ಸಂಜು ಮತ್ತು ಶೇಖರ್ ಹಾಗೂ ಅವನ ಗೆಳೆಯರ ನಡುವೆ ಜಗಳ ಶುರುವಾಗುತ್ತದೆ. ಈ ಸಮಯದಲ್ಲಿ, ಇತರ ಸೈಕಲ್ ಸವಾರರು ಮುನ್ನಡೆಯುತ್ತಾರೆ. ತನ್ನ ಸ್ನೇಹಿತರು ಸಂಜುನನ್ನು ಹಿಂದೆ ಹಿಡಿದಿಟ್ಟಿರುವಾಗ ಶೇಖರ್ ರೇಸ್ ಪಥಕ್ಕೆ ಮರಳುತ್ತಾನೆ. ಸಂಜು ಶೇಖರ್‌ನ ಗೆಳೆಯರಿಂದ ತಪ್ಪಿಸಿಕೊಂಡು ರೇಸ್‍ಗೆ ಸೇರಿಕೊಳ್ಳುತ್ತಾನೆ. ರೇಸ್‍ನ ಅಂತಿಮ ಸುತ್ತುಗಳಲ್ಲಿ ಸಂಜು ಶೇಖರ್‌ಗೆ ಸಮಸಮವಾಗಿ ಅಂತಿಮವಾಗಿ ಮುಗಿಯುವ ಕ್ಷಣಗಳಲ್ಲಿ ಅವನನ್ನು ಸೋಲಿಸಿ ಮಾಡಲ್ ಕಾಲೇಜ್, ತನ್ನ ಅಪ್ಪ ಮತ್ತು ಸೋದರನಿಗೆ ಬಹುನಿರೀಕ್ಷಿತ ವಿಜಯವನ್ನು ತಂದುಕೊಡುತ್ತಾನೆ. == ಪಾತ್ರವರ್ಗ == ಸಂಜಯ್‍ಲಾಲ್ ಶರ್ಮಾ ಉರ್ಫ಼್ ಸಂಜು ಆಗಿ ಆಮಿರ್ ಖಾನ್ ಶೇಖರ್ ಮಲ್ಹೋತ್ರಾ ಆಗಿ ದೀಪಕ್ ತಿಜೋರಿ ಅಂಜಲಿ ಆಗಿ ಆಯೇಶಾ ಝುಲ್ಕಾ ರತನ್‍ಲಾಲ್ ಶರ್ಮಾ ಆಗಿ ಮಮಿಕ್ ಸಿಂಗ್ ಕಲ್ಪನಾ ಆಗಿ ಕಿರನ್ ಜ಼ವೇರಿ ಸೂರಜ್ ಥಾಪರ್ ದೇವಿಕಾ ಆಗಿ ಪೂಜಾ ಬೇದಿ ರಾಮ್‍ಲಾಲ್ ಶರ್ಮಾ ಆಗಿ ಕುಲ್‍ಭೂಷಣ್ ಖರ್ಬಂದಾ ಮಕ್ಸೂದ್ ಆಗಿ ಆದಿತ್ಯ ಲಾಖಿಯಾ ಘನ್‍ಶ್ಯಾಮ್ ಆಗಿ ದೇವೇನ್ ಭೋಜಾನಿ ಮಿ. ದುಬೇ ಆಗಿ ಅಸ್ರಾನಿ ಫ಼ೆಯ್ಸಲ್ ಖಾನ್ ಇಮ್ರಾನ್ ಖಾನ್ ಶಾರೋಖ್ ಭರೂಚಾ ಅಂಜನ್ ಶ್ರೀವಾಸ್ತವ್ ರಾಜ್‍ಪೂತ್‍ನ ಪ್ರಾಂಶುಪಾಲನಾಗಿ ಅಜೀತ್ ವಾಚ್ಛಾನಿ ದೇಬ್ ಮುಖರ್ಜಿ ರವೀಂದ್ರ ಕಪೂರ್ ಜತಿನ್ ಪಂಡಿತ್ ಲಲಿತ್ ಪಂಡಿತ್ ಅಮೋಲ್ ಗುಪ್ತೆ ಗಿರಿಜಾ ಶೆಟ್ಟರ್ == ತಯಾರಿಕೆ == ಮನ್ಸೂರ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದರೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದರು. ಮುಖ್ಯ ನಟನ ಮತ್ತು ಶೇಖರ್ ಮಲ್ಹೋತ್ರಾನ ಪಾತ್ರಕ್ಕಾಗಿ ಕೆಲವರು ಧ್ವನಿ ಪರೀಕ್ಷೆ ನೀಡಿದ್ದರು. ರತನ್‍ನ ಪಾತ್ರಕ್ಕಾಗಿ ಆದಿತ್ಯ ಪಂಚೋಲಿಯವರನ್ನು ಆಯ್ಕೆಮಾಡಲಾಗಿತ್ತು ಆದರೆ ಅಂತಿಮವಾಗಿ ಈ ಪಾತ್ರವು ಮಮಿಕ್ ಸಿಂಗ್‍ರಿಗೆ ಹೋಯಿತು. ಕಥೆಯು ೧೯೭೯ರ ಅಮೇರಿಕನ್ ಚಲನಚಿತ್ರ ಬ್ರೇಕಿಂಗ್ ಅವೆಯೊಂದಿಗೆ ಕೆಲವು ಹೋಲಿಕೆಗಳನ್ನು ಹೊಂದಿದೆ. ಎರಡೂ ಚಿತ್ರಗಳು ಸ್ನೇಹ, ವರ್ಗ ನಿರ್ಬಂಧಗಳು, ಸೈಕಲ್ ರೇಸ್ ಮತ್ತು ಹೆತ್ತವರೊಂದಿಗಿನ ಸಂಬಂಧ ಸೇರಿದಂತೆ, ಹಲವಾರು ವಿಷಯದ ಹೋಲಿಕೆಗಳನ್ನು ಹೊಂದಿವೆ. ಆದರೆ ಸ್ಪಷ್ಟವಾಗಿ ಭಿನ್ನವಾದ ಚಿತ್ರಗಳಾಗಿವೆ. ಇವುಗಳ ಕಥೆಗಳು, ಪಾತ್ರಗಳು, ಪ್ರೇರಣೆಗಳು, ನಿಭಾಯಿಸುವಿಕೆ ಮತ್ತು ರೇಸ್‍ನ ನಿಯಮಗಳು ಭಿನ್ನವಾಗಿವೆ. == ಸಂಗೀತ == ಚಿತ್ರದ ಸಂಗೀತವನ್ನು ಜತಿನ್ ಲಲಿತ್ ಸಂಯೋಜಿಸಿದರು ಮತ್ತು ಗೀತೆಗಳ ಸಾಹಿತ್ಯವನ್ನು ಮಜರೂಹ್ ಸುಲ್ತಾನ್‍ಪುರಿ ಬರೆದರು. ಈ ಧ್ವನಿವಾಹಿನಿಯು ಈ ಸಂಗೀತ ನಿರ್ದೇಶಕರ ವೃತ್ತಿಜೀವನವನ್ನು ಪ್ರಾರಂಭಿಸಲು ನೆರವಾಯಿತು. ಈ ಚಿತ್ರವು ೧೯೯೩ರ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿತ್ತು. "ಪೆಹಲಾ ನಶಾ" ಹಾಡನ್ನು ಸಂಪೂರ್ಣವಾಗಿ ನಿಧಾನ ಚಲನೆಯಲ್ಲಿ ಚಿತ್ರೀಕರಿಸಲಾಗಿತ್ತು. ಈ ತಂತ್ರವನ್ನು ಆಮೇಲೆ ಅನೇಕ ಚಿತ್ರಗಳಲ್ಲಿ ಬಳಸಲಾಯಿತು. ಪೆಹಲಾ ನಶಾ ಅಭಿಮಾನಿಗಳಿಂದ ಶ್ಲಾಘಿತವಾದ ಗೀತೆಯಾಯಿತು.ಎಲ್ಲ ಹಾಡುಗಳು ಮಜರೂಹ್ ಸುಲ್ತಾನ್‍ಪುರಿ ಅವರಿಂದ ರಚಿತ; ಎಲ್ಲ ಸಂಗೀತ ಜತಿನ್ ಲಲಿತ್ ಅವರಿಂದ ರಚಿತ == ೩೮ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು == ವಿಜೇತ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ – ನಾಸಿರ್ ಹುಸೇನ್ ಫಿಲ್ಮ್‌ಫೇರ್ ಅತ್ಯುತ್ತಮ ಸಂಕಲನ ಪ್ರಶಸ್ತಿ – ಜ಼ಫ಼ರ್ ಸುಲ್ತಾನ್, ದಿಲೀಪ್ ಕಟಲ್ಗಿ == ಬಾಕ್ಸ್ ಆಫ಼ಿಸ್ == ಜೋ ಜೀತಾ ವಹಿ ಸಿಕಂದರ್ ಭಾರತದಲ್ಲಿ ಒಟ್ಟು ₹೪೦ ದಶಲಕ್ಷದಷ್ಟು ಗಳಿಸಿತು. ಹಣದುಬ್ಬರಕ್ಕೆ ಸರಿಹೊಂದಿಸಿದಾಗ ಇದು ₹713 ದಶಲಕ್ಷಕ್ಕೆ ಸಮಾನವಾಗುತ್ತದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು, ಮತ್ತು ಬಾಕ್ಸ್ ಆಫ಼ಿಸ್‌ನಲ್ಲಿ ಹಿಟ್ ಎಂದು ಘೋಷಿತವಾಯಿತು. == ಸ್ಥಳಗಳು == ಚಿತ್ರವು ಡೆಹ್ರಾಡೂನ್‍ನ್ನು ಆಧಾರ ಮಾಡಿಕೊಂಡಿದೆ ಎಂದು ಉಪಕ್ರಮಿಕ ಧ್ವನಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಯಾದರೂ, ಇದು ಕೊಡೇಕೆನಾಲ್‍ನಲ್ಲಿ ನಡೆಯುತ್ತದೆ ಎಂದು ಚಿತ್ರದಲ್ಲಿ ಎರಡು ಬಾರಿ ಹೇಳಲಾಗಿದೆ (ಎರಡೂ ಸಲ ಸೈಕಲ್ ರೇಸ್‍ನ ವೇಳೆ ವೀಕ್ಷಕ ವಿವರಣೆಗಾರನು ಹೇಳುತ್ತಾನೆ). ಚಲನಚಿತ್ರವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಚಿತ್ರೀಕರಿಸಲಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == @ ಐ ಎಮ್ ಡಿ ಬಿ